Pages

ನುಡಿದರೆ ಮುತ್ತಿನಹಾರದಂತಿರಬೇಕು

Thursday 25 March 2010

ಸಾಹಿತ್ಯ-ಬಸವಣ್ಣ


ನುಡಿದರೆ ಮುತ್ತಿನಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ॥೧॥

ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು ॥೨॥

ನುಡಿಯೊಳಗಾಗಿ ನಡೆಯದಿದ್ದರೆ
ಮೆಚ್ಚ ಕೂಡಲಸಂಗಮದೇವ ॥೩॥


(ಈ ವಚನವನ್ನು ಬಸವರಾಜ ರಾಜಗುರುಗಳ ದನಿಯಲ್ಲಿ ಇಲ್ಲಿ ಕೇಳಿ)

Read more...

ತಿಪ್ಪಾರಳ್ಳಿ ಬಲು ದೂರಾ

Thursday 11 March 2010

ಸಾಹಿತ್ಯ-ಟಿ.ಪಿ.ಕೈಲಾಸಮ್


ತಿಪ್ಪಾರಳ್ಳಿ ಬಲು ದೂರಾ
ನಡೆಯಕ್ ಬಲು ದೂರಾ
ಅಲ್ಲಿ ನಡೆಯೋಳ್ ನಮ್ ಬಸ್ವಿ ॥

ಬೋರೇಗೌಡನೆಂಬ ಗೌಡ ಬಂದ ಬೆಂಗಳೂರ್ಗೆ, ಬಂದ ಬೆಂಗಳೂರ್ಗೆ
ಬಳೇಪೇಟೆಮೇಲೆ ಹತ್ತಿ ಬರುತಿದ್ದಾಗ, ಗೌಡ ಬರುತಿದ್ದಾಗ
ಪೌಡರ್ ಗೀಡರ್ ಹಚ್ಚಿಕೊಂಡಾ ಮನುಷ್ಯಳೊಬ್ಬ್ಳು
ಕಣ್ಣು ಗಿಣ್ಣು ಮಿಟುಕ್ಸಿ ಗಿಟುಕ್ಸಿ ನೋಡಿ ನಕ್ಕಾಗ
ಆಗ ಬೇಡವ್ವಾ ಬಳೇಪೇಟೇ
ನಮಸ್ಕಾರ ನಗರ್ ಪೇಟೇ
ನಮ್ ತಿಪ್ಪಾರಳ್ಳಿ ಬಲು ದೂರಾ ॥೧॥

ತಮಾಶಿ ನೋಡೋದಕ್ಕೆ ಬೋರಾ ಬಂದ ಲಾಲ್ಬಾಗ್ ತೋಟಕ್ಕೆ
ಬೋರಾ ಲಾಲ್ಬಾಗ್ ತೋಟಕ್ಕೆ
ಹುಲೀನ್ ನೋಡಿ ಬರೇಹಾಕಿದ್ ದೊಡ್ಬೆಕ್ ಅಂದ್ಕೊಂಡ್ ಬೋರಾ
ದೊಡ್ಬೆಕ್ ಅಂದ್ಕೊಂಡಾ
ಬೋರಾ ನುಗ್ಗಿ ಹುಲೀ ಬೆನ್ ಸವರ್ಸ್ತಾ ಪುಸ್ ಪುಸ್ ಅಂತಿದ್ದಾ
ಬೋರಾ ಪುಸ್ ಪುಸ್ ಅಂತಿದ್ದಾ
ಹುಲೀ ರೇಗ್ಕೊಂಡ್ ಬೋರನ್ ಕೆಡುವ್ಕೊಂಡ್ ಹಲ್ಗಳ್ ಬಿಟ್ಟಾಗ
ಬೋರಾ ಹೆದರ್ಕೊಂಡ್ ಕಣ್ಣೀರ್ ಸುರಿಸ್ತಾ ಕೈಮುಗಿದ್ ಕಿರಿಚ್ದಾಗ
ಬುಟ್ಬುಡಪ್ಪಾ ಬೆಕ್ಕಿನ್ರಾಯಾ ನಮಸ್ಕಾರ್ ನನ್ನೊಡೆಯಾ
ನಮ್ ತಿಪ್ಪಾರಳ್ಳಿ ಬಲು ದೂರಾ ॥ ೨ ॥

ಬಸ್ವೀನ್ ಕರ್ಕೊಂಡ್ ಬಂದಾ ಬೋರಾ ವಿಜಯದಶಮೀಗೆ
ಬೋರಾ ವಿಜಯದಶಮೀಗೆ
ಅರಮನೆ ಗೇಟ್ ಮುಂದೆ ಅಂಬಾರಿ ಕಟ್ಟಿದ್ ಆನೆ ನೋಡ್ದ
ಬೋರಾ ಆನೆ ನೋಡ್ದ
ಬಸ್ವೀನ್ ಮೆಟ್ಟಿಲ್ ಮೇಲೆ ಹತ್ತಿಸ್ಬಿಟ್ಟು ತಾನು ಬುರ್ ಬುರ್ ನಕ್ಬಿಟ್ಟಾ
ಬೋರಾ ಬುರ್ ಬುರ್ ನಕ್ಬಿಟ್ಟಾ
ಮಾವ್ತಾ ಮುದ್ಕಾ ಗುರೀಗುರ್ ಗುಮ್ಮಾ ಇಲಿಯಂತ್ ಕಿರಿಚ್ಬಿಟ್ಟಾ
ಆನೆ ಕೊರಳ್ನಾ ಓಡಿಸ್ತಾ ನಡಸ್ತಾ ಹತ್ರ ಹೋಗ್ತಿದ್ದಾ
ಬೋರಾ ಹತ್ರ ಹೋಗ್ತಿದ್ದಾ
ಮನೇಗ್ ಹೋಗ್ರೋ ಮಾವುತ್ ಸಾಬ್ರ ಗಂಟೆ ಉಳಿಸ್ಕೊಂಡ್ ಗುರಿಕಾರಾ
ನಮ್ ತಿಪ್ಪಾರಳ್ಳಿ ಬಲು ದೂರಾ, ನಡೆಯಕ್ ಬಲು ದೂರಾ
ನಮ್ ತಿಪ್ಪಾರಳ್ಳಿ ಬಲು ದೂರಾ, ನಡೆಯಕ್ ಬಲು ದೂರಾ
ಆದ್ರೆ ಅಲ್ಲಿ ನಡೆಯೋಳ್ ನಮ್ ಬಸ್ವಿ ॥ ೩॥

ಈ ಹಾಡನ್ನು ಇಲ್ಲಿ ಕೇಳಿ


This is a parody of It's a Long Way to Tipperary

Read more...

ನಾನು ಕೋಳೀಕೇ ರಂಗಾ

ಸಾಹಿತ್ಯ-ಟಿ.ಪಿ.ಕೈಲಾಸಮ್


ನಾನು ಕೋಳೀಕೇ ರಂಗಾ
ಕೋನೂ ಳೀನೂ ಕೇನೂ ರಾನೂ ಸೊನ್ನೆ ಗಾ
ಕಾಕೋತ್ವ ಳೀ ಕಾಕೇತ್ವ ರಾ ಮತ್ ಸೊನ್ನೆ ಗಾ
ಇದನ್ ಹಾಡಕ್ ಬರ್ದೇ ಬಾಯ್ ಬಿಡೋನು ...
ಬೆಪ್ನನ್ಮಗಾ ...
ನಮ್ಮ ತಿಪ್ಪಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಮಗಾ

ನಾವುಟ್ಟಿದ್ ದಡ್ರಳ್ಳಿ ಬೆಳೆದದ್ ಬ್ಯಾಡ್ರಳ್ಳಿ
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ
ನಮ್ ಶ್ಯಾನುಭೋಗಯ್ಯ ಅಲ್ದೆ ಶೇಕ್ದಾರಪ್ಪಾ
ಇವರೆಲ್ಲಾ ಕಂಡವ್ರೆ ನನ್ನಾ

ಹೆಂಡ್ರನ್ನು ಮಕ್ಳನ್ನು ಬಿಟ್ಟು, ಹಟ್ಟಿ ಅವನ್ನು ಬಿಟ್ಟು, ಬಂದಿವ್ನಿ ನಾ
ನಿಮ್ಮುಂದೆ ನಿಂತಿವ್ನಿ ನಾ, ನಮ್ಮಳ್ಳಿ ಕಿಲಾಡಿ ಉಂಜಾ

ಎತ್ತಿಲ್ದ್ ಬಂಡಿಗ್ಳೂರೂ, ಎಣ್ಣಿಲ್ದ್ ದೀಪಗ್ಳೂರೂ, ತುಂಬಿದ್ ಮೈಸೂರಿಗ್ ಬಂದೇ
ದೊಡ್ ಚೌಕಟ್ ಮುಂದೆ, ದೊಡ್ ಗಾಡಿ ಯರಡ್ ಹಿಂದೇ, ಕಟಂಗಡೀಲ್ ಬುತ್ತೀ ತಿಂದಿದ್ದೇ
ಅಲ್ ಕುದ್ರೇಮೇಲ್ ಕುಂತಿದ್ದೇ

ಒಬ್ ಸಾಬ್ರಯ್ಯ ಎದುರಿಗ್ ಬಂದ್
ಮೀಸೇಮೇಲ್ ಆಕ್ತಾನ್ ತನ್ ಕೈಯ್ಯಾ
ಏಳ್ತಾನಣ್ಣಾ, ಗದರಸ್ತಲೀ ಬೆದರಸ್ತಲೀ,
ಏಯ್ ಯಾರೋ ಯಾಕೋ ಇಲ್ಲಿ ಅಂತಾ

ಹಾಹಾಹಾಹಾ ನಾನು ಕೋಳೀಕೆ ರಂಗಾ

ಈ ಹಾಡನ್ನು ಇಲ್ಲಿ ಕೇಳಿ


The above song is a spoof of "Constantinople"

Read more...

ಮೂರುತಿಯನೆ ನಿಲಿಸೋ

Tuesday 9 March 2010

ಸಾಹಿತ್ಯ-ಪುರಂದರದಾಸ


ಮೂರುತಿಯನೆ ನಿಲಿಸೋ
ಮಾಧವ ನಿನ್ನ ಮೂರುತಿಯನೆ ನಿಲ್ಲಿಸೋ॥

ಎಳೆತುಳಸಿಯ ವನಮಾಲೆಯು ಕೊರಳೊಳು ।
ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ ॥೧॥

ಮುತ್ತಿನ ಸರ ನವರತ್ನದುಂಗುರವಿಟ್ಟು ।
ಮತ್ತೆ ಶ್ರೀ ಲಕುಮಿಯ ಉರದೊಳೊಪ್ಪುವ ನಿನ್ನ ॥ ೨ ॥

ಭಕ್ತರ ಕಾಮಧೇನು ಕಲ್ಪತರು ಎಂಬೋ (ಭಾಗ್ಯದ ಸುರಧೇನು ) ।
ಮುಕ್ತಿದಾಯಕ ನಮ್ಮ (ಸಿರಿ ) ಪುರಂದರವಿಠಲ ನಿನ್ನ ॥ ೩॥

Read more...

ಯಾಕೆ ಮೂಕನಾದ್ಯೋ

ಸಾಹಿತ್ಯ-ಜಗನ್ನಾಥದಾಸ


ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ ।
ಯಾಕೆ ಮೂಕನಾದೆ ಲೋಕಪಾಲಕ ಎನ್ನ ।
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥

ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ ।
ಮಂದಿಯೊಳಗೆ ಎನ್ನ ಮಂದನ್ನ ಮಾಡಿದ್ಯಲ್ಲೋ ॥ ೧ ॥

ಬೇಕಾಗದಿದ್ದರಿನ್ನ್ಯಾಕೆ ಕೈಯನು ಪಿಡಿದೆ ।
ಕಾಕುಜನರೊಳೆನ್ನ ನೂಕಿಬಿಟ್ಟು ನೀನು (/ನೀ) ॥ ೨ ॥

ಈಗ ಪಾಲಿಸದಿರೆ ಯೋಗಿಕುಲವರ್ಯ ।
ರಾಘವೇಂದ್ರನೆ ಭವ ಸಾಗುವುದ್ಹ್ಯಾಂಗಯ್ಯ ॥ ೩ ॥

ನಿನ್ನಂಥ ಕರುಣಿಯಿಲ್ಲ ಎನ್ನಂಥ ಕೃಪಣಿಯಿಲ್ಲ ।
ಘನ್ನಮಹಿಮ ನೀ ಎನ್ನನು ಬಿಟ್ಟೀಗ ॥ ೪ ॥

ಜನನಿಯು ನೀ (ಎನಗೆ) ಎನ್ನ ಜನಕನಯ್ಯ ।
ಮನ್ನಿಸೊ ನೀ ನಿತ್ಯಾನನ್ಯ ಶರಣನೆ (/ಶರಣ್ಯ) ॥ ೫ ॥

ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೋ ।
ಇಂದು ನೀ ಕೈಬಿಟ್ಟರೆನ್ನ ಮುಂದೆ ಕಾಯುವರ್ಯಾರೋ ॥ ೬ ॥

ನಾಥನು ನೀ ಅನಾಥನು ನಾನಯ್ಯ ।
ಪಾತಕರರಿ ಜಗನ್ನಾಥವಿಠ್ಠಲದೂತ (/ಜಗನ್ನಾಥವಿಠ್ಠಲದಾಸ) ॥ ೭ ॥

Read more...

ಯಾದವ ನೀ ಬಾ

ಸಾಹಿತ್ಯ-ಪುರಂದರದಾಸ


ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂದನ ಬಾರೋ
ಸೋದರ ಮಾವನ ಮಥುರೇಲಿ ಮಡುಹಿದ
ಯಶೋದೆಕಂದ ನೀ ಬಾರೋ ॥

ಶಂಖಚಕ್ರಗಳು ಕರದಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ
ಅಕಳಂಕಮಹಿಮ ಆದಿನಾರಾಯಣ
ಬೇಕೆಂಬ ಭಕುತರಿಗೊಲಿಬಾರೋ ॥೧॥

ಕಣಕಾಲಂದುಗೆ ಘಲುಘಲುರೆನುತಲಿ
ಝಣಝಣ ವೇಣುನಾದದಲಿ
ಚಿಣ್ಣಿಕೋಲು ಚೆಂಡು ಬುಗುರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ ॥ ೨ ॥

ಖಗವಾಹನನೇ ಬಗೆಬಗೆ ರೂಪನೇ
ನಗುಮೊಗದರಸನೇ ನೀ ಬಾರೋ
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಠ್ಠಲ ನೀ ಬಾರೋ ॥ ೩॥

Read more...

ನೋಡಿ ಮರುಳಾಗದಿರು ಪರಸತಿಯರ

Friday 5 March 2010

ಸಾಹಿತ್ಯ-ಕನಕದಾಸ


ನೋಡಿ ಮರುಳಾಗದಿರು ಪರಸತಿಯರ
ನಾಡೊಳಗೆ ಕೆಟ್ಟವರ ಪರಿಯ ನೀನರಿತು ॥

ಶತಮುಖವನೆ ಮಾಡಿ ಸುರಸಭೆಗೈದ ನಹುಷ ತಾ
ಆತುರದಿ ಶಚಿಗೆ ಮನಸೋತು ಭ್ರಮಿಸಿ
ಅತಿಬೇಗ ಚಲಿಸೆಂದು ಬೆಸಸಲಾ ಮುನಿಯಿಂದ
ಗತಿಗೆಟ್ಟು ಉರಗನಾಗಿದ್ದ ಪರಿಯ ನೀನರಿತು ॥೧॥

ಸುರಪತಿಯು ಗೌತಮನ ಸತಿಗಾಗಿ ಕಪಟದಿಂ
ಧರೆಗೆ ಮಾಯವೇಷ ಧರಿಸಿ ಬಂದು
ಪರಮ ಮುನಿಶಾಪದಿಂ ಅಂಗದೊಳು
ಸಾವಿರ ಕಣ್ಣಾಗಿ ಇದ್ದ ಪರಿಯ ನೀನರಿತು ॥೨॥

ಸ್ಮರನ ಶರತಾಪವನು ಪರಿಹರಿಸಲರಿಯದಲೆ
ದುರುಳ ಕೀಚಕನು ದ್ರೌಪದಿಯ ಕೆಣಕಿ
ಮರುತಸುತ ಭೀಮನಿಂದಿರುಳೊಳಗೆ ಹತನಾದ
ನರಕುರಿಯೆ ನಿನ್ನ ಪಾಡೇನು ಧರೆಯೊಳಗೆ ॥೩॥

ಹರನ ವರವನು ಪಡೆದು ಶರಧಿಮಧ್ಯದೊಳಿದ್ದು
ದುರುಳ ದಶಶಿರನು ಜಾನಕಿಯನೊಯ್ಯೆ
ಧುರದೊಳಗೆ ರಘುವರನ ಶರದಿಂದ ಈರೈದು
ಶಿರಗಳನೆ ಹೋಗಾಡಿಸಿಕೊಂಡ ಪರಿಯ ನೀನರಿತು ॥೩॥

ಇಂಥಿಂಥವರು ಕೆಟ್ಟು ಹೋದವರೆಂಬುದನರಿತು
ಭ್ರಾಂತಿಯನೆ ಬಿಟ್ಟು ಭಯಭಕ್ತಿಯಿಂದ
ಅಂತರಾತ್ಮಕ ಕಾಗಿನೆಲೆಯಾದಿ ಕೇಶವನ
ನಿರುತವು ನೀ ಭಜಿಸಿ ಸುಖಿಯಾಗೋ ಮನುಜ ॥೪॥

Read more...

ಬೇನೆ ತಾಳಲಾರೆ ಬಾ

ಸಾಹಿತ್ಯ-ಪುರಂದರದಾಸ


ಬೇನೆ ತಾಳಲಾರೆ ಬಾ ಎನ್ನ ಗಂಡ ಬೇನೆ ತಾಳಲಾರೆನು ॥

ಬೇಳೆ ಬೆಲ್ಲವ ತಂದು, ಹೋಳಿಗೆಯನು ಮಾಡಿ, ಬಾಳೆಹಣ್ಣ ತಂದು ಬದಿಯಲ್ಲಿ ಬಡಿಸಿ,
ಹಾಲು ಸಕ್ಕರೆ ಹದ ಮಾಡಿ ತಂದಿಡು, ಎರಕದ ಗಿಂಡಿಲಿ ನೀರ ತಾರೊ ಗಂಡ ॥೧॥

ಗಸಗಸೆ ಲಡ್ಡಿಗೆ, ಹಸನಾದ ಕೆನೆ ಹಾಲು, ಬಿಸಿಯ ಹುರಿಗಡಲೆ, ಬಿಳಿಯ ಬೆಲ್ಲ,
ರಸದಾಳಿ ಕಬ್ಬು ಸುಲಿದು ಮುಂದಿಟ್ಟರೆ ವಿಷವಿಷವೆಂದು ನಾ ತಿಂಬೆನೊ ॥೨॥

ಹಪ್ಪಳ ಕರಿದಿಡು, ಸಂಡಿಗೆ ಹುರಿದಿಡು, ತುಪ್ಪದಿ ನಾಲ್ಕು ಚಕ್ಕುಲಿ ಕರಿದು,
ಬಟ್ಟಲೊಳು ತುಪ್ಪ ಕೆನೆ ಮೊಸರ ಹಾಕಿಡು, ಬಚ್ಚಲಿಗೆ ಬರುತೇನೆ ನೀರ ಹದಮಾಡೊ ॥೩॥

ಎಣ್ಣೆ ಬದನೆಕಾಯಿ, ಬೆಣ್ಣೆ ಸಜ್ಜಿಯ ರೊಟ್ಟಿ, ಸಣ್ಣಕ್ಕಿಬೋನ ಬದಿಯಲಿಟ್ಟು,
ಸಣ್ಣ ತುಂಚಿಯ ಲಿಂಬೆ, ಲಲಮಾಗಡಿಬೇರು, ಉಣ್ಣುಣ್ಣು ಎಂದರೆ ಉಂಬೆನೊ ಗಂಡ ॥೪॥

ಗಂಧ ಕುಂಕುಮವನು ಬದಿಯಲಿ ತಂದಿಡು, ಮಡಿಯಲಿ ತಂಬಿಗೆ ನೀರ ತಾರೋ,
ಮಣೆಯನ್ನೆ ಹಾಕಿ ಕೆಳಗೆ ಬಟ್ಟಲಿಡು, ತೀರ್ಥವನೆ ತೊಕ್ಕೊಂಡು ನಾ ಬರುತೇನೆ ಗಂಡ ॥೫॥

ನಾನುಂಡು ಇದ್ದದ್ದು ಬಾಲರಿಗುಣಲಿಕ್ಕೆ ಮೇಲಿಟ್ಟು ಮುಚ್ಚಿಡೋ ಎನ್ನ ಗಂಡ,
ಸ್ನಾನ ಮಾಡಿಕೊಂಡು, ಸೀರೆಯ ತೆಕ್ಕೊಟ್ಟು, ತಾಂಬೂಲ ತೆಕ್ಕೊಂಡು ಬಾರೊ ನನ್ನ ಗಂಡ ॥೬॥

ಸಣ್ಣ ನುಚ್ಚು ಇಟ್ಟುಕೊ, ಗೊಡ್‍ಹುಳಿ ಕಾಸಿಕೊ, ದೊನ್ನೆಯೊಳಗೆ ತುಪ್ಪ ಬಡಿಸಿಕೊ,
ಎಣ್ಣೆ ತಟಕು ಉಪ್ಪಿನಕಾಯಿ ಸಂಗಾತ ಚೆನ್ನಾಗಿ ಉಣ ಬಂದು ಕಾಲೊತ್ತೊ ಗಂಡ ॥೭॥

ಹೋಳಿಯ ಹುಣ್ಣಿಮೆ ತಣ್ಣನೆ ತಂಗಾಳಿ ಚಳಿ ಬಹಳ ಗಂಡ ಕದವ ಮುಚ್ಚೊ
ಮಂಚದ ಮೇಲೆ ಮಲಗಿದೆನ್ನನು ಸಕಲಾದಿ ಹಚ್ಚಡ ಬಿಗಿ ಬಿಗಿದ್‍ಹೊಚ್ಚೊ ॥೮॥

ಸದ್ದು ಮಾಡದ ಹಾಗೆ ಎದ್ದು ಕದವ ಮುಚ್ಚೊ ಮುದ್ದು ಸ್ವಾಮಿಯನ್ನೆ ನೆನವುತಲಿ
ಮುದ್ದು ಶ್ರೀ ಪುರಂದರ ವಿಠ್ಠಲನ ನೆನೆವುತ ನೀನೊಂದು ಮೂಲೇಲಿ ಬಿದ್ದುಕೊಳ್ಳೋ ಗಂಡ ॥೯॥

Read more...

ಹಣ್ಣು ಬಂದಿದೆ ಕೊಳ್ಳಿರೋ ನೀವೀಗ

ಸಾಹಿತ್ಯ-ಪುರಂದರದಾಸ


ಹಣ್ಣು ಬಂದಿದೆ ಕೊಳ್ಳಿರೋ ನೀವೀಗ
ಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯಹಣ್ಣು ॥

ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು
ಭವರೋಗಗಳನೆಲ್ಲ ಕಳೆವ ಹಣ್ಣು,
ನವನೀತ ಚೋರನೆಂಬ ಯಮನ ಅಂಜಿಪ ಹಣ್ಣು
ಅವನಿಯೊಳ್ ಶ್ರೀರಾಮನೆಂಬೊ ಹಣ್ಣು ॥೧॥

ಕೊಳೆತು ಹೋಗುವುದಲ್ಲ ಹುಳಿತು ಹೋಗುವುದಲ್ಲ
ಕಳೆದು ಬಿಸಾಡಿಸಿ ಕೊಳ್ಳುವುದಲ್ಲ,
ಅಳೆದು ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೊದಲ್ಲ
ಒಳಿತಾದ ಹರಿಯೆಂಬೊ ಮಾವಿನಹಣ್ಣು ॥೨॥

ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ
ಕಷ್ಟದಿ ಹಣಕೊಟ್ಟು ಕೊಂಬುವುದಲ್ಲ,
ಸೃಷ್ಟಿಯೊಳಗೆ ನಮ್ಮ ಪುರಂದರವಿಠ್ಠಲ
ಕೃಷ್ಣರಾಯನೆಂಬೊ ಶ್ರೇಷ್ಠವಾದ ಹಣ ॥೩॥

Read more...

ಹಣ್ಣು ಮಾರುವವನ ಹಾಡು

ಸಾಹಿತ್ಯ-ಕಯ್ಯಾರ ಕಿಜ್ಞಣ್ಣ ರೈ


ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತೀಳೆ,
ಬೀದರ ಜಿಲ್ಲೆಯ ಸೀಬೆಯ ಹಣ್ಣು, ಬೆಂಗಳೂರಿನ ಸೇಬಿನ ಹಣ್ಣು,
ಕೊಳ್ಳಿರಿ ಹಿಗ್ಗನು ಹರಿಸುವವು, ಕಲ್ಲುಸಕ್ಕರೆಯ ಮರೆಸುವವು ॥೧॥

ಕೊಳ್ಳಿರಿ ಮಧುಗಿರಿ ದಾಳಿಂಬೆ, ಬೆಳವಲ ಬಯಲಿನ ಸಿಹಿಲಿಂಬೆ,
ಬೆಳಗಾವಿಯ ಸವಿ ಸಪೋಟ, ದೇವನಹಳ್ಳಿಯ ಚಕ್ಕೋತ,
ನಾಲಿಗೆ ಬರವನು ಕಳೆಯುವವು, ದೇಹದ ಬಲವನು ಬೆಳೆಸುವವು ॥೨॥

ಗಂಜಾಮ್ ಅಂಜೀರ್, ತುಮಕೂರ ಹಲಸು,
ಧಾರವಾಡದ ಆಪೂಸು, ಮಲೆನಾಡಿನ ಅನಾನಸು,
ಸವಿಯಿರಿ ಬಗೆಬಗೆ ಹಣ್ಣುಗಳ, ಕನ್ನಡ ನಾಡಿನ ಹಣ್ಣುಗಳ॥೩॥

Read more...

Popular Posts