Pages

ಭಕುತ ಜನ ಮುಂದೆ ನೀನವರ ಹಿಂದೆ

Sunday 8 October 2017

ಸಾಹಿತ್ಯ-ವಿಜಯದಾಸ


ಭಕುತ ಜನ ಮುಂದೆ ನೀನವರ ಹಿಂದೆ।
ಯುಕುತಿ ಕೈಗೊಳ್ಳದೋ ಗಯಾ ಗದಾಧರನೆ ॥

ಕಟ್ಟೆರಡು ಬಿಗಿದು ನದಿ ಸೂಸಿ ಹರಿಯುತಿರೆ,
ಕಟ್ಟಳೆಯಲಿ ಹರಿಗೋಲು ಹಾಕಿ ।
ನೆಟ್ಟನೆ ಆಚೆ ಈಚೆಗೆ ಹೋಗಿ ಬರುವಾಗ,
ಹುಟ್ಟು ಮುಂದಲ್ಲದೆ ಹರಿಗೋಲು ಮುಂದೇ ? ॥೧॥

ಕಾಳೆ ಹೆಗ್ಗಾಳೆ ದುಂದುಭಿ ಭೇರಿ ತಮಟೆ,
ನಿಸ್ಸಾಳೆ ನಾನಾವಾದ್ಯ ಘೋಷಣೆಗಳು ।
ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ,
ಆಳು ಮುಂದಲ್ಲದೆ ಅರಸು ತಾ ಮುಂದೇ ? ॥೨॥

ಉತ್ಸವ ವಾಹನದಿ ಬೀದಿಯೊಳು ಮೆರೆಯುತಿರೆ,
ಸತ್ಸಂಗತಿಗೆ ಹರಿದಾಸರೆಲ್ಲ ।
ವತ್ಸಲ ಸಿರಿವಿಜಯವಿಠ್ಠಲ ವೆಂಕಟಾಧೀಶ,
ವತ್ಸ ಮುಂದಲ್ಲದೆ ಧೇನು ತಾ ಮುಂದೇ ? ॥೩॥

0 comments:

Popular Posts